ಕೋವಿಡ್ ನಿಯಂತ್ರಣ: ಅಂಜುಮನ್ ಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ
ಹುಬ್ಬಳ್ಳಿ: ಕೋವಿಡ್ ಹೊಸ ರೂಪಾಂತರಿ ತಳಿ ಓಮಿಕ್ರಾನ್ ನಿಯಂತ್ರಣ ಕುರಿತು ಜಾಗೃತಿ ಮೂಡಿಸಲು ನಗರದ ಅಂಜುಮನ್ ಸಂಸ್ಥೆಯ ನೆಹರೂ ಕಾಲೇಜಿನಲ್ಲಿ ಇಂದು ಸಂವಾದ ಕಾರ್ಯಕ್ರಮ ಹಾಗೂ ಧಾರ್ಮಿಕ ಮುಖಂಡರ ಸಭೆ ಜರುಗಿತು.
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಳ ಅತ್ಯಗತ್ಯ. ಪ್ರತಿಯೊಬ್ಬರ ಕೋವಿಡ್ ನಿರೋಧಕ ಎರಡು ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು.ಧಾರ್ಮಿಕ ಮುಖಂಡರು,ಮುತುವಲ್ಲಿಗಳು ಪ್ರತಿದಿನ ಪ್ರಾರ್ಥನೆ ವೇಳೆ ಈ ಕುರಿತು ಜನಸಾಮಾನ್ಯರಿಗೆ ಮಾಹಿತಿ ನೀಡಿ, ಲಸಿಕೆ ಪ್ರಮಾಣ ಹೆಚ್ಚಳಗೊಳಿಸಲು ಕಾರಣರಾಗಬೇಕು ಎಂದರು.
ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಯುಸೂಫ್ ಸವಣೂರ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ನಾವೆಲ್ಲ ಹೆಚ್ಚು ಆದ್ಯತೆ ನೀಡಬೇಕು.ಯಾವುದೇ ಅವೈಜ್ಞಾನಿಕ ಸಂದೇಹಗಳಿಗೆ ಆಸ್ಪದ ನೀಡದೆ ಕೋವಿಡ್ ನಿರೋಧಕ ಲಸಿಕೆಗಳನ್ನು ಪ್ರತಿಯೊಬ್ಬರೂ ಹಾಕಿಸಿಕೊಳ್ಳಬೇಕು. ಆರೋಗ್ಯಯುತ ರಾಷ್ಟ್ರ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ. ಸಹೋದರತೆ,ಸಹಬಾಳ್ವೆ ಪಾಲಿಸಬೇಕು ಎಂದರು.
ಮಹಾನಗರಪಾಲಿಕೆ ಜಂಟಿ ಆಯುಕ್ತ ಅಜೀಜ್ ದೇಸಾಯಿ,ಡಾ.ಫಾರೂಕ್ ಉಪ್ಪಿನ ಮತ್ತಿತರರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ,ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್,ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ,ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಮತ್ತಿತರರು ಇದ್ದರು.