ಚಿನ್ನದ ಪದಕ ವಿಜೇತ ಸಾರಿಗೆ ಚಾಲಕರಿಗೆ ಸನ್ಮಾನ
ಹುಬ್ಬಳ್ಳಿ: ಅಪಘಾತ ರಹಿತವಾಗಿ ಸಾರ್ವಜನಿಕ ಬಸ್ ಚಾಲನೆ ಮಾಡುವ ಮೂಲಕ ಪ್ರಯಾಣಿಕರನ್ನು ಒಂದು ಸ್ಥಳದಿಂದ ಅವರು ಹೋಗಬೇಕಾದ ಸ್ಥಳಕ್ಕೆ ಕ್ಷೇಮವಾಗಿ ಕರೆದೊಯ್ಯುವ ಕೆಲಸ ಮಾಡುತ್ತಿರುವ ಚಾಲಕರುಗಳು ಸಾರಿಗೆ ಸಂಸ್ಥೆಯ ಸುರಕ್ಷಾ ರಾಯಭಾರಿಗಳು ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಹೇಳಿದ್ದಾರೆ.
ನಗರದ ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗ ಕಚೇರಿಯಲ್ಲಿ ಆಯೋಜಿಸಿದ್ದ ಅಪಘಾತ ರಹಿತ ಚಾಲನೆಗಾಗಿ ಚಿನ್ನದ ಪದಕ ವಿಜೇತ ಚಾಲಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹುಬ್ಬಳ್ಳಿ ವಿಭಾಗದಲ್ಲಿ ಅಪಘಾತ ರಹಿತ ಚಾಲನೆಗಾಗಿ 2016ನೇ ಸಾಲಿನಲ್ಲಿ 10 ಚಾಲಕರು ಹಾಗೂ 2017ನೇ ಸಾಲಿನಲ್ಲಿ 19 ಚಾಲಕರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ಮುಂದಿನ ದಿನಗಳಲ್ಲಿ ಪದಕ ಪಡೆಯುವವರ ಸಂಖ್ಯೆ ಹೆಚ್ಚಾಗಲಿ ಎಂದು ಅವರು ಆಶಿಸಿದರು.
ವಿಭಾಗಿಯ ಸಂಚಾರ ಅಧಿಕಾರಿ ಎಸ್ ಎಸ್ ಮುಜುಂದಾರ ಮಾತನಾಡಿ ಅಪಘಾತ ರಹಿತ ಚಾಲನೆ ಮಾಡುವ ಮೂಲಕ ಸಂಸ್ಥೆಯು ಮೋಟಾರು ಅಪಘಾತ ವಾಹನ ಪರಿಹಾರಕ್ಕಾಗಿ ನೀಡುವ ಮೊತ್ತದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಉಳಿತಾಯ ಮಾಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ಘಟಕ ವ್ಯವಸ್ಥಾಪಕರುಗಳಾದ ವೈ.ಎಂ.ಶಿವರೆಡ್ಡಿ, ದೇವಕ್ಕ ನಾಯ್ಕ ಹಾಗೂ ಅಧಿಕಾರಿಗಳಾದ ಶ್ರೀಪತಿ ದೊಡ್ಡ ಲಿಂಗಣ್ಣ ನವರ, ಶಂಕರ ಆಲಮೇಲ, ನಾಗಮಣಿ ಭೋವಿ, ಸುನಿಲ ವಾಡೆಕರ, ಸದಾನಂದ ಒಡೆಯರ, ರೋಹಿಣಿ ಬೇವಿನಕಟ್ಟಿ, ಸಂಚಾರ ಅಧೀಕ್ಷಕ ಐ.ಜಿ.ಮಾಗಾಮಿ ಮತ್ತಿತರರು ಇದ್ದರು.
ಮುಖ್ಯಮಂತ್ರಿಗಳ ಚಿನ್ನದ ಪದಕ
ಸತತ 15 ವರ್ಷಗಳ ಅವಧಿಯಲ್ಲಿ ಯಾವುದೇ ಅಪಘಾತ ಮಾಡಿರಬಾರದು.ಈ ಅಧಿಯಲ್ಲಿ ಸಾರ್ವಜನಿಕ ದೂರು ಅಥವಾ ಇನ್ನಾವುದೇ ಅಪರಾಧ ಪ್ರಕರಣದಲ್ಲಿ ಸಿಲುಕಿರಬಾರದು.ಪ್ರತಿ ವರ್ಷ ಕನಿಷ್ಠ 200 ಹಾಗೂ ಸರಾಸರಿ 240 ದಿನಗಳ ಹಾಜರಾತಿ ಹೊಂದಿರಬೇಕು. ಚಿನ್ನದ ಪದಕವು 8 ಗ್ರಾಂ ಚಿನ್ನ 32 ಗ್ರಾಂ ಬೆಳ್ಳಿಯಿಂದ ಮಾಡಲಾಗಿರುತ್ತದೆ.ಇದರೊಂದಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಂತರದಲ್ಲೂ ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪದಕ ವಿಜೇತ ಚಾಲಕರಿಗೆ ಮಾಸಿಕ ಒಂದು ನೂರು ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.