ಕಿಮ್ಸ್ ಆವರಣದಲ್ಲಿ ಮೊಳಗಿದ ಕನ್ನಡದ ಕಂಪು
ಹುಬ್ಬಳ್ಳಿ, ಅ.28: ಇಂದು ಕಿಮ್ಸ್ ಆವರಣದಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೋಟಿ ಕಂಠ ಗಾಯನ ನನ್ನ ನಾಡು ನನ್ನ ಹಾಡು ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳು ಮೊಳಗಿದವು.
ರಾಷ್ಟ್ರಕವಿ ಕುವೆಂಪು ಅವರು ರಚನೆಯ ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ.., ಬಾರಿಸು ಕನ್ನಡ ಡಿಂಡಿಮವ.., ಹುಯಿಲಗೋಳ ನಾರಾಯಣರಾಯರು ಬರೆದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು.., ಡಾ.ಡಿ.ಎಸ್. ಕರ್ಕಿ ರಚಿಸಿದ ಹಚ್ಚೇವು ಕನ್ನಡದ ದೀಪ.., ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆದ ವಿಶ್ವ ವಿನೂತನ ವಿದ್ಯಾ ಚೇತನ.. ಮತ್ತು ಹಂಸಲೇಖ ಅವರು ಬರೆದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು .. ಹಾಡುಗಳನ್ನು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂತರಠಾಣಿ, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ.ಸಿ., ಮುಖಂಡರಾದ ಪ್ರೊ.ಐ.ಜಿ. ಸನದಿ, ಧಾರವಾಡ ರಂಗಾಯಣ ಕಲಾವಿದರು, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಡಿದರು.
ಪ್ರಾಚಾರ್ಯ ಡಾ.ಈಶ್ವರ ಹೊಸಮನಿ ಪ್ರತಿಜ್ಞಾ ವಿಧಿ ಬೋಧಿಸಿದರು.