ಬ್ಯಾಹಟ್ಟಿ: ಯುವಕನ ಮನೆಗೆ ಸಚಿವ ಹಾಲಪ್ಪ ಆಚಾರ್ ಭೇಟಿ ಕುಟುಂಬದವರಿಗೆ ಸಾಂತ್ವನ
ಹುಬ್ಬಳ್ಳಿ, ಸೆ.01: ಇಂಗಳಹಳ್ಳಿ ಬಳಿ ಬೆಣ್ಣೆಹಳ್ಳ ಪ್ರವಾಹದಲ್ಲಿ ತೇಲಿ ಹೋಗಿರುವ ಬ್ಯಾಹಟ್ಟಿಯ ಯುವಕ ಆನಂದ ಹಿರೇಗೌಡ್ರ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಗಣಿ ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಅವರು ಬುಧವಾರ(ಆ.31) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಹಳ್ಳದ ಹರಿವು ಹೆಚ್ಚುತ್ತಿರುವುದನ್ನು ಗಮನಿಸಿದ ಸ್ಥಳೀಯರ ಸೂಚನೆಗಳನ್ನೂ ಲೆಕ್ಕಿಸದೇ ,ಯುವಕರು ಹುಚ್ಚು ಉತ್ಸಾಹದಿಂದ ಹಳ್ಳಕ್ಕೆ ಧುಮುಕಿ ಅಪಾಯವನ್ನು ಆಹ್ವಾನ ಮಾಡಿಕೊಂಡಿರುವುದು ದುರಂತಕ್ಕೆ ಕಾರಣವಾಗಿದೆ.ಜಿಲ್ಲಾಡಳಿತವು ಯುವಕನ ಪತ್ತೆ ಕಾರ್ಯಾಚರಣೆ ಮುಂದುವರೆಸಿದೆ.ಹಳ್ಳ ಇಳಿಮುಖವಾದ ಮೇಲೆ ಕಾರ್ಯಾಚರಣೆ ಚುರುಕಾಗಲಿದೆ.ಕುಟುಂಬದವರು ಧೈರ್ಯ ತಂದುಕೊಳ್ಳಬೇಕು.ಅವರ ನೋವಿನಲ್ಲಿ ನಾವೆಲ್ಲ ಭಾಗಿಯಾಗಿದ್ದೇವೆ, ಪತ್ತೆ ಕಾರ್ಯ ಪೂರ್ಣಗೊಂಡ ನಂತರ ಮುಂದಿನ ಕ್ರಮಗಳನ್ನು ತ್ವರಿತವಾಗಿ ಜರುಗಿಸಲಾಗುವುದು ಎಂದು ಸಚಿವ ಹಾಲಪ್ಪ ಆಚಾರ್ ಸಾಂತ್ವನ ಹೇಳಿದರು.
ಜಿಲ್ಲಾಧಿಕಾರಿ ಗುರದತ್ತ ಹೆಗಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸಪುರ, ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ, ಕಂದಾಯ ನೀರಿಕ್ಷಕ ಎಮ್.ಕೆ.ಪಾಟೀಲ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು