ಮಹಾರಾಷ್ಟ್ರದಿಂದ ಆಗಮಿಸಿದ 08 ಜನರ ಸ್ವ್ಯಾಬ್ ಸಂಗ್ರಹ 4 ಜನ ಕ್ವಾರಂಟೈನ್
ಹುಬ್ಬಳ್ಳಿ:ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಅವಧಿಯೊಳಗೆ ಪಡೆದಿರುವ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹೊಂದುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ 04-08-2021 ರಂದು ಬೆಳಿಗ್ಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ನೇತೃತ್ವದಲ್ಲಿ ಮಹಾರಾಷ್ಟ್ರದಿಂದ ರಾಜ್ಯ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಗಳ ಮೂಲಕ ಆಗಮಿಸಿದ ಪ್ರಯಾಣಿಕರ ವಿವರ ಪರಿಶೀಲಿಸಲಾಯಿತು.
ಆರ್.ಟಿ.ಪಿ.ಸಿ.ಆರ್ ವರದಿ ಹೊಂದದೇ ರಾಜ್ಯಕ್ಕೆ ಬಂದಿರುವ 08 ಪ್ರಯಾಣಿಕರನ್ನು ತಪಾಸಣೆ ಮಾಡಲಾಯಿತು.ಇವರಲ್ಲಿ 4 ಜನರು ವೈದ್ಯಕೀಯ ಚಿಕಿತ್ಸೆಗಾಗಿ ಬಂದಿರುವ ಕಾರಣದಿಂದ ಸ್ವ್ಯಾಬ್ ಹಾಗೂ ಸಂಪರ್ಕ ಸಂಖ್ಯೆ ಸಂಗ್ರಹಿಸಿ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದ 4 ಜನರನ್ನು ಹುಬ್ಬಳ್ಳಿಯ ಅಂಜುಮನ್ ಆಸ್ಪತ್ರೆ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಆರ್.ಟಿ.ಪಿ.ಸಿ.ಆರ್ ತಪಾಸಣೆಗಾಗಿ ಸ್ವಾಬ್ ಸಂಗ್ರಹಣೆ ಮಾಡಲಾಗಿದೆ.
ಇನ್ನು ಮುಂದೆ ಪ್ರತಿದಿನ ಆರ್.ಟಿ.ಪಿ.ಸಿ.ಆರ್ ವರದಿ ಹೊಂದದೇ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ಮಾಡಲಾಗುವುದು ಎಂದು ಮಹಾನಗರಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.