ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಥಾನಿ
ಹುಬ್ಬಳ್ಳಿ, ಸೆ.22: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮುಂಡಗೋಡ ತಾಲೂಕಿನ ಕಾತೂರಿನ
40 ವರ್ಷದ ಫಕ್ಕೀರಪ್ಪ ಎಂಬುವವರ ಮೇಲೆ ಜುಲೈ 31 ರಂದು ಕರಡಿ ದಾಳಿ ಮಾಡಿತ್ತು. ಕರಡಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ಅವರಿಗೆ ಉಚಿತವಾಗಿ ಸೆಪ್ಟೆಂಬರ್ 12 ರಂದು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಥಾನಿ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಡಗೋಡ ತಾಲೂಕು ಆಸ್ಪತ್ರೆಯಲ್ಲಿ ಮೊದಲು ಚಿಕಿತ್ಸೆ ಪಡೆದಿದ್ದರು. ನಂತರ ವೈದ್ಯರು ಕಿಮ್ಸ್ ಗೆ ದಾಖಲಾಗುವಂತೆ ಸೂಚಿಸಿದರು. ಮುಖ ಮತ್ತು ಕಣ್ಣಿನ ಭಾಗದ ಮೂಳೆಯನ್ನು ಕರಡಿ ಕಿತ್ತುಕೊಂಡು ಹೋಗಿತ್ತು. ಅಲ್ಲದೇ ಕೈಗಳಿಗೆ ಗಾಯವನ್ನು ಮಾಡಿತ್ತು. ರೆಟಿನಾ ಭಾಗ ಹಾಳಾಗಿರಲಿಲ್ಲ. 3ಡಿ ಕಸ್ಟಮೈಜ್ಡ್ ಟೈಟಾನಿಯಂ ಇಂಪ್ಲಾಂಟ್ ಅಳವಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಆಪರೇಶನ್ ಮಾಡಿದರೆ ಮೊದಲಿನ ಹಾಗೆ ಕಣ್ಣುಗಳು ಕಾಣಿಸಲಿವೆ. ಡಾ. ಮಂಜುನಾಥ ವಿಜಾಪುರ, ಡಾ.ವಸಂತ ಕಟ್ಟೀಮನಿ, ಡಾ. ವಿವೇಕಾನಂದ ಜೀವಣಗಿ, ಡಾ.ಧರ್ಮೇಶ ಹಾಗೂ ಡಾ.ಸ್ಪೂರ್ತಿ ಅವರ ತಂಡದವರು ಯಶಸ್ವಿ ಚಿಕಿತ್ಸೆ ಮಾಡಿದ್ದಾರೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ ಸಿ,
ಡಾ.ಮಂಜುನಾಥ ಬಿಜಾಪುರ, ಡಾ. ರಾಜಶೇಖರ ದ್ಯಾಬೇರಿ, ಡಾ. ವಸಂತ ಕಟ್ಟೀಮನಿ, ಡಾ.ಅನುರಾಧ ನಾಗನಗೌಡರ ಸೇರಿದಂತೆ ಇತರರು ಹಾಜರಿದ್ದರು.